ಶ್ರೀ ವೆಂಕಟೇಶ್ವರ ಕೃಪಾ ಎಂಟರ್ಟೈನರ್ಸ್ ಲಾಂಛನದಲ್ಲಿ ಉದಯ್.ಕೆ ಮೆಹತಾ ನಿರ್ಮಿಸಿ, ಶಶಾಂಕ್ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಕಿಚ್ಚ ಸುದೀಪ ಅಭಿನಯದ ಅದ್ದೂರಿ ವೆಚ್ಚದ ಬಚ್ಚನ್ ಚಿತ್ರದ ಎರಡನೇ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ೧೬ ದಿನಗಳ ಈ ಚಿತ್ರೀಕರಣದಲ್ಲಿ ಸುದೀಪ್, ಪರೂಲ್ ಯಾದವ್, ತುಲಿಪ್ಜೋಷಿ, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಬಾಗವಹಿಸಿದ್ದ ನಾನಾ ದೃಶ್ಯಗಳನ್ನು ಹಾಗು ರವಿವರ್ಮ ರವರ ಸಾರಥ್ಯದಲ್ಲಿ ಸಾಹಸಮಯ ದೃಶ್ಯಗಳನ್ನು ಶೇಖರ್ ಚಂದ್ರು ರವರ ಛಾಯಾಗ್ರಹಣದಲ್ಲಿ ಬೆಂಗಳೂರಿನ ಹಲವಾರು ಸ್ಥಳಗಳಲ್ಲಿ ಹಾಗೂ ವಿಶಾಲವಾಗಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ಗಳಲ್ಲಿ ಚಿತ್ರೀಕರಿಸಲಾಗಿದೆ.
ಸೆಪ್ಟಂಬರ್ ೫ ರಿಂದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರದ ಮತ್ತೊಬ್ಬ ನಾಯಕಿ ಭಾವನಾ ಮೆನನ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ